ಹಾಸನ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ಉಡುಪಿ, ಮೇ 9: ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ನನ್ನು ಬಂಧಿಸುವಂತೆ ಒತ್ತಾಯಿಸಿ ಮತ್ತು ಬಿಜೆಪಿಯ ಪಕ್ಷಪಾತ ಧೋರಣೆ ಖಂಡಿಸಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು, ದಿನಬೆಳಗಾದರೆ ಲವ್ ಜಿಹಾದ್ ಲವ್ ಜಿಹಾದ್ ಎಂದು ಭಾಷಣ ಬಿಗಿಯುವ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರಜ್ವಲ್ ರೇವಣ್ಣ 1000ಕ್ಕಿಂತಲೂ ಅಧಿಕ ಮಹಿಳೆಯರ ಮಾನ ಹರಾಜು ಮಾಡಿದಾಗ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.
ಉಡುಪಿಯ ಕಾಲೇಜು ಮಕ್ಕಳ ಪುಂಡಾಟವನ್ನು ದೊಡ್ಡ ವಿವಾದವಾಗಿ ಬಿಂಬಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾ ಡುವ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಒಂದು ಮಾತೂ ಆಡದಿರುವುದು ಹಿಂದೂ ಗಳ ಮೇಲಿನ ಅವರ ಕಾಳಜಿ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಎಂಬುದನ್ನು ಬಿಂಬಿಸುತ್ತದೆಂದು ಅವರು ಆರೋಪಿಸಿದರು.
ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ ಹಾಗೂ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮೂಲೂರ್ ಮಾತನಾಡಿ ದರು. ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯ ಮೂಮ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಜಿಯಾ ನಸ್ರುಲ್ಲಾ, ಎಸ್ಡಿಪಿಐ ಉಡುಪಿ ಜಿಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.