ಕುಂದಾಪುರ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊರಗ ವಿದ್ಯಾರ್ಥಿಗಳ ಸಾಧನೆ
ರತ್ನಾ, ದೀಕ್ಷಿತ್, ಅಶ್ವಿನಿ
ಕುಂದಾಪುರ, ಮೇ 9: ಕುಂದಾಪುರ ವಲಯ ಕ್ಷೇತ್ರ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಶಂಕರನಾರಾಯಣ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿ ರತ್ನಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 510 (ಶೇ.81.06) ಅಂಕ ಪಡೆದು ಕನ್ನಡ ಮಾಧ್ಯಮ ವಿಭಾಗದಲ್ಲಿ ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೊರಗ ಸಮುದಾಯದ ವಿದ್ಯಾರ್ಥಿನಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ಶಾನ್ಕಟ್ಟು ಆಂತೂರು ನಿವಾಸಿ ಮಂಜು ಮತ್ತು ಗೀತಾ ಕೊರಗ ದಂಪತಿಯ ಪುತ್ರಿಯಾಗಿರುವ ಇವರು, ’ವಾರ್ತಾಭಾರತಿ’ ಜೊತೆ ಮಾತನಾಡಿ, ಮನೆಯಿಂದ ಶಾಲೆಗೆ 6-7 ಕಿ.ಮೀ ದೂರವಿದ್ದು ನಿತ್ಯವೂ ಅಣ್ಣ ಬೆಳಿಗ್ಗೆ ಕರೆದೊಯ್ದು ಸಂಜೆ ಕರೆತರುತ್ತಿದ್ದ. ಯಾವುದೇ ಟ್ಯೂಷನ್ ಹೋಗಿಲ್ಲ. ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಿ ಓದುತ್ತಿದ್ದೆ. ಮುಂದೆ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಮುಂದುವರೆಯುವುದಾಗಿ ಹೇಳಿದರು.
‘ಮುಂದೆ ಓದುವಾಸೆ ಇದೆ, ಆದರೆ ಹಣವಿಲ್ಲ’
ಬೈಂದೂರು ವಲಯ ಕ್ಷೇತ್ರ ಶಿಕ್ಷಣ ವ್ಯಾಪ್ತಿಗೊಳಪಡುವ ಮಾವಿನಕಟ್ಟೆಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಪ್ರೌಢಶಾಲೆಯ ವಿದ್ಯಾರ್ಥಿ ದೀಕ್ಷಿತ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 507(ಶೇ81.12) ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಕುಂದಾಪುರ ತಾಲೂಕಿನ ಕೆಂಚನೂರು ಶಾಲೆ ಸಮೀಪದ ನಿವಾಸಿ ಕೂಲಿ ಕಾರ್ಮಿಕ ಚಿಕ್ಕ-ದುರ್ಗಿ ಕೊರಗ ದಂಪತಿ ಪುತ್ರ ದಂಪತಿಯ ಪುತ್ರ ದೀಕ್ಷಿತ್ ಮುಂದೆ ವಾಣಿಜ್ಯ ವಿಭಾಗದಲ್ಲಿ ಓದುವಾಸೆಯಿದ್ದರೂ ಬಡತನ ಓದಿಗೆ ಅಡ್ಡವಾಗುತ್ತಿದೆ ಎಂದಿ ದ್ದಾರೆ. ’ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು ’ಓದಲು ಆಸೆಯಿದೆ. 8ನೇ ತರಗತಿ ಓದುವ ತಂಗಿಯಿದ್ದು ಇಬ್ಬರು ಓದಿದರೆ ಮನೆಯವರಿಗೆ ಕಷ್ಟವಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಶುಲ್ಕ ಪಾವತಿಸಲು ಕಷ್ಟವಾಗುತ್ತದೆ ಎಂದು ಹೇಳಿದರು.
ಅಶ್ವಿನಿಗೆ 502 ಅಂಕ
ಮುದೂರಿನ ಭಾರತ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಧಾಕರ- ರುದ್ರು ಕೊರಗ ದಂಪತಿ ಪುತ್ರಿ ಅಶ್ವಿನಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 502 (ಶೇ.80.32) ಅಂಕ ಪಡೆದಿದ್ದಾರೆ. ಅವರು ಮುಂದೆ ವಾಣಿಜ್ಯ ವಿಭಾಗದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.