ಮೇ 11ರಂದು ಮಣಿಪಾಲ ಗಾಂಧಿ ಸೆಂಟರ್ನಲ್ಲಿ ಜಯಂತ್ ಕಾಯ್ಕಿಣಿ ಜೊತೆ ಸಂವಾದ
ಮಣಿಪಾಲ, ಮೇ 9: ಖ್ಯಾತ ಲೇಖಕ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಕುರಿತ ‘ಜಯಂತ್ ಕಾಯ್ಕಿಣಿ ಮತ್ತು ಅವರ ಸಾಹಿತ್ಯದೊಂದಿಗೆ ಒಂದು ದಿನ’ ಎಂಬ ಒಂದು ದಿನದ ವಿಚಾರ ಸಂಕಿರಣ ಮೇ 11ರಂದು ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆಯಲಿದೆ.
ಜಯಂತ್ ಕಾಯ್ಕಿಣಿ ಅವರ ಬರಹಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲುವ ಸಲುವಾಗಿ, ವಿಶೇಷವಾಗಿ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗ ದವರಿಗೆ ಈ ವಿಚಾರ ಸಂಕಿರಣವನ್ನು ಪ್ರಾಥಮಿಕವಾಗಿ ಇಂಗ್ಲಿಷ್ನಲ್ಲಿ ಆಯೋಜಿಸಲಾಗಿದೆ ಎಂದು ಗಾಂಧಿ ಸೆಂಟರ್ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.
ಈ ವಿಚಾರ ಸಂಕಿರಣ ಕಾಯ್ಕಿಣಿಯವರ ಬರಹಗಳ ವಿವಿಧ ಪ್ರಕಾರಗಳಾದ ಸಣ್ಣ ಕಥೆಗಳು, ಕವನಗಳು, ಪ್ರಬಂಧಗಳು, ನಾಟಕಗಳು ಮತ್ತು ಹಾಡುಗಳು, ವಿದ್ಯಾರ್ಥಿಗಳ ಗೋಷ್ಠಿ ಮತ್ತು ಕಾಯ್ಕಿಣಿಯವರ ಕುರಿತು ಮಾಡಿದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಕಾಯ್ಕಿಣಿಯವರ ಸಾಹಿತ್ಯವನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಮತ್ತು ವಿಶಾಲ ಅರ್ಥದಲ್ಲಿ ಸಾಹಿತ್ಯದ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಚಾರ ಸಂಕಿರಣವನ್ನು ಸಾಹಿತಿ-ವಿದ್ವಾಂಸ ಪ್ರೊ.ರಾಜೇಂದ್ರ ಚೆನ್ನಿ ಅವರು ಮೇ 11ರಂದು ಬೆಳಗ್ಗೆ 10:00 ಗಂಟೆಗೆ ಮಾಹೆಯ ತಾರಾಲಯದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಲಿದ್ದಾರೆ. ಬಳಿಕ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ವಿಶೇಷ ಉಪನಯಾಸ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಭಿಲಾಷ ಹಂದೆ, ಡಾ.ಸಿರಾಜ್ ಅಹಮದ್ ಮತ್ತು ಪ್ರೊ. ವರದೇಶ್ ಹಿರೇಗಂಗೆ ಮಾತನಾಡಲಿದ್ದಾರೆ.ಇದರ ನಂತರ ಕಾಯ್ಕಿಣಿಯವರ ವಿವಿಧ ಕೃತಿಗಳ ಕುರಿತು ವಿದ್ಯಾರ್ಥಿಗಳ ಗೋಷ್ಠಿ ನಡೆಯಲಿದೆ.
ನಂತರ ಕಾಯ್ಕಿಣಿ, ಅವಿನಾಶ್ ಕಾಮತ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಶ್ರಾವ್ಯ ಬಾಸ್ರಿ ಅವರಿಂದ ಜಯಂತ್ ಕಾಯ್ಕಿಣಿ ಹಾಡುಗಳ ಪ್ರಸ್ತುತಿ ನಡೆಯಲಿದೆ. ಸಂಜೆ 4:30ಕ್ಕೆ ಕಾಯ್ಕಿಣಿಯವರ ಜೊತೆಗೆ ಸಂವಾದ ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳು ಮಾಹೆಯ ಪ್ಲಾನೆಟೋರಿಯಂ ಸಭಾಂಗಣದಲ್ಲಿ ನಡೆಯಲಿವೆ ಎಂದು ಪ್ರೊ.ಹಿರೇಗಂಗೆ ತಿಳಿಸಿದ್ದಾರೆ.