ಪಣಂಬೂರು: ರಿಕ್ಷಾ ಚಾಲಕನಿಗೆ ಮಾರಕಾಸ್ತ್ರದಿಂದ ಹಲ್ಲೆ; ಪ್ರಕರಣ ದಾಖಲು
ಮಂಗಳೂರು: ರಿಕ್ಷಾ ಚಾಲಕನಿಗೆ ಮಾರಕಾಸ್ತ್ರದಿಂದ ಇರಿದಿರುವ ಘಟನೆ ಪಣಂಬೂರು ಬೀಚ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ಮಾರಕಾಸ್ತ್ರದಿಂದ ಇರಿತಕ್ಕೆ ಒಳಗಾದವರನ್ನು ಮಂಗಳೂರು ಬಂದರ್ ನಿವಾಸಿ ಅರಾಫತ್ (30) ಎಂದು ಗುರುತಿಸಲಾಗಿದೆ.
ಅರಾಫತ್ ಮಂಗಳೂರು ನಗರ ವಲಯದ ರಿಕ್ಷಾ ಚಾಲಕರಾಗಿದ್ದು, ನಗರದಿಂದ ಪಣಂಬೂರಿಗೆ ಬಾಡಿಗೆ ಹೋಗಿ ಪ್ರಯಾಣಿಕರನ್ನು ಬಿಟ್ಟು ಪಣಂಬೂರು ಬೀಚ್ ಬಳಿಯ ಪಾರ್ಕ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅದೇ ರಿಕ್ಷಾ ಪಾರ್ಕ್ನಲ್ಲಿ ಬಾಡಿಗೆ ಮಾಡುತ್ತಿದ್ದ ನಾಲ್ವರು ರಿಕ್ಷಾ ಚಾಲಕರು "ಮಂಗಳೂರು ನಗರದ ರಿಕ್ಷಾ ಚಾಲಕರು ಇಲ್ಲಿ ಬಾಡಿಗೆ ಮಾಡಬಾರದೆಂದು ಆಕ್ಷೇಪಿಸಿ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಿಕ್ಷಾ ಚಾಲಕರಿಂದ ಪ್ರತಿಭಟನೆ
ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಮಂಗಳೂರು ನಗರ ರಿಕ್ಷಾ ಚಾಲಕರು ವೆನ್ಲಾಕ್ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರಿಕ್ಷಾ ಚಾಲಕರು, ಪಣಂಬೂರು ರಿಕ್ಷಾ ಪಾರ್ಕ್ ನಲ್ಲಿ ಚಾಲಕರು ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ಇಂತಹಾ ಕೃತ್ಯ ಇದು ಮೊದಲೇನಲ್ಲ ಈ ಹಿಂದೆಯೂ ಹಲವು ಬಾರಿ ಹಲ್ಲೆ, ಕೊಲೆಯತ್ನದಂತಹಾ ಕೃತ್ಯಗಳನ್ನು ಎಸಗಿದ್ದಾರೆ. ಇಂತಹಾ ಕೃತ್ಯಗಳು ಇಂದಿಗೇ ಕೊನೆಯಾಗಬೇಕು. ನಗರ ಪರ್ಮಿಟ್ ರಿಕ್ಷಾಗಳಿಗೆ ನಗರ ವ್ಯಾಪ್ತಿಯ ಎಲ್ಲೆಡೆಯೂ ಬಾಡಿಗೆ ಮಾಡಲು ಮುಕ್ತ ಅವಕಾಶ ನೀಡಬೇಕು. ಕೊಲೆಯತ್ನ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.
ಪಣಂಬೂರಿಗೆ ಬಾಡಿಗೆಗೆ ಹೋಗಿ ಬಳಿಕ ಬೀಚ್ ಬಳಿಯ ರಿಕ್ಷಾ ಪಾರ್ಕ್ ನಲ್ಲಿ ನನ್ನ ಆಟೊ ರಿಕ್ಷಾ ನಿಲ್ಲಿಸಿದ್ದೆ. ಆಗ ಅಲ್ಲಿನ ರಿಕ್ಷಾ ಚಾಲಕನೊಬ್ಬ ಬಂದು ಬಾಯಿಗೆ ಬಂದಂತೆ ಬೈಯ್ಯಲು ಆರಂಭಿಸಿದ. ಘಟನೆಯ ವೀಡಿಯೊವನ್ನು ನನ್ನ ಮೊಬೈಲ್ ನಲ್ಲಿ ಮಾಡುತ್ತಿದ್ದೆ. ಅದನ್ನು ಕಿತ್ತುಕೊಳ್ಳಲು ಅವರು ಯತ್ನಿಸಿದರು. ಈ ವೇಳೆ ಮತ್ತೋರ್ವ ಹಿಂದಿನಿಂದ ಬಂದು ಸ್ಪಾನರ್ ನಲ್ಲಿ ತಲೆಗೆ ಹೊಡೆದ, ಮತ್ತೋರ್ವ ಹರಿತವಾದ ಆಯುಧದಿಂದ ಇರಿದ, ಅದು ಕೈಗೆತಾಗಿದ್ದು, ಈಗ ಆಸ್ಪತ್ರೆಯಲ್ಲಿದ್ದು, ವೈದ್ಯರು ಮೂರು ಸ್ಟಿಚ್ ಹಾಕಿದ್ದಾರೆ ಎಂದು ಇರಿತಕ್ಕೊಳಗಾದ ರಿಕ್ಷಾ ಚಾಲಕ ಅರಾಫತ್ ಅವರು ದೂರಿದ್ದಾರೆ.