ಎಂ.ಸಿ.ಸಿ ಬ್ಯಾಂಕ್ ಶಾಖೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲು ರಿಸರ್ವ್ ಬ್ಯಾಂಕ್ ಅನುಮತಿ: ಅನಿಲ್ ಲೋಬೊ
ಎಂ.ಸಿ.ಸಿ.ಬ್ಯಾಂಕ್ ಸ್ಥಾಪಕರ ದಿನಾಚಣೆ, ನೂತನ ಆಡಳಿತ ಕಚೇರಿ ಉದ್ಘಾಟನೆ
ಮಂಗಳೂರು, ಮೇ.10; ಎಂ.ಸಿ.ಸಿ ಬ್ಯಾಂಕ್ ತಬ್ನ ಶಾಖೆಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಅವರು ಇಂದು ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಎಂ.ಸಿ.ಸಿ ಬ್ಯಾಂಕ್ ಲಿ.ಇದರ 112 ನೆ ಸ್ಥಾಪಕರ ದಿನಾಚರಣೆ ಮತ್ತು ಬ್ಯಾಂಕ್ ನ ಆಡಳಿತ ಕಚೇರಿ ಯ ಉದ್ಘಾಟನಾಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಂಸಿಸಿ ಬ್ಯಾಂಕ್ 1912ರಲ್ಲಿ ಪಿ.ಎಫ್ ಸಲ್ದಾನರವರ ಮೂಲಕ ಸ್ಥಾಪನೆಯಾಗಿ ಎಲ್ಲರ ಸಹಕಾರದಿಂದ 112 ವರ್ಷಗಳ ಹಲವಾರು ಮೈಲುಗಲ್ಲನ್ನು ದಾಟಿ 1000 ಕೋಟಿ ಆರ್ಥಿಕ ವ್ಯವಹಾರ ನಡೆಸಲು ಸಾಧ್ಯವಾಗಿದೆ.ಈ ಸಂದರ್ಭದಲ್ಲಿ ಬ್ಯಾಂಕ್ ನ ಸ್ಥಾಪನೆಗೆ ಕಾರಣರಾದ ಸಂಸ್ಥಾಪಕರನ್ನು ಕೃತಜ್ಞತೆ ಯಿಂದ ಸ್ಮರಿಸುವುದಾಗಿ ತಿಳಿಸಿದರು.
*ಬ್ಯಾಂಕ್ ನ ನೂತನ ಆಡಳಿತ ಕಚೇರಿಯ ಬಲಿಪೂಜೆ ನೆರವೇರಿಸಿದ ಮಿಲಾಗ್ರೇಸ್ ಚರ್ಚ್ ನ ಧರ್ಮ ಗುರುಗಳಾದ ವಂ.ಬೊನ್ ವೆಂಚರ್ ನಝೆರತ್ ಉದ್ಘಾಟಿಸಿ ಮಾತನಾಡುತ್ತಾ,ಉತ್ತಮ ಚರಿತ್ರೆಯೊಂದಿಗೆ ಪ್ರಾಮಾಣಿಕವಾದ ಬ್ಯಾಂಕ್ ನ ಆಡಳಿತ ವರ್ಗ ಸಿಬ್ಬಂದಿ ಗಳ ದುಡಿಮೆಯಿಂದ ಬ್ಯಾಂಕ್ ಬೆಳವಣಿಗೆ ಯಾಗಿದೆ.ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ ಈ ಸೇವೆ ಇನ್ನೂ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಅತಿಥಿಯಾಗಿ ಭಾಗವಹಿಸಿದ ದರ್ಮ ಗುರುಗಳಾದ ವಂ.ರೋಬರ್ಟ್ ಡಿ ಸೋಜ ಶುಭ ಹಾರೈಸಿದರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬ್ಯಾಂಕಿನ ಹಿರಿಯ ಸಲಹೆಗಾರ ನ್ಯಾಯವಾದಿ ಕ್ಲಾರೆನ್ಸ್ ಫಾಯಸ್ ಮಾತನಾಡುತ್ತಾ, ಎಂ.ಸಿ.ಸಿ ಮಹಾತ್ಮ ಗಾಂಧಿಯವರ ತತ್ವದ ಪ್ರಕಾರ ಗ್ರಾಹಕರ ಸೇವೆಯನ್ನು ಪ್ರಾಮಾಣಿ ಕವಾಗಿ ನೀಡುತ್ತಾ ಬಂದಿದೆ. ಬ್ಯಾಂಕ್ ಗ್ರಾಹಕರನ್ನು ಹೊಂದಿ ಕೊಂಡಿ ರಬೇಕು. ಗ್ರಾಹಕರು ಬ್ಯಾಂಕಿನ ಅವಿಭಾಜ್ಯ ಅಂಗ ಎಂದು ಶುಭ ಹಾರೈಸಿದರು.
*ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡುತ್ತಾ,ಎಂಸಿಸಿ ಬ್ಯಾಂಕ್ 112ವರ್ಷಗಳ ಕಾಲ ನಮ್ಮ ನಡುವೆ ಬದುಕಿರುವುದೇ ಮಹತ್ವದ ಸಾಧನೆ. ಈ ಸಾಧನೆ ಯನ್ನು ಮಾಡಲು ಸಂಸ್ಥೆಯ ನ್ನು ಆರಂಭಿಸಿದವರು ಮತ್ತು ನಡೆಸಿಕೊಂಡು ಬಂದ ಆಡಳಿತ ವರ್ಗ ದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಈ ದಿನದ ನೆನಪಿಗಾಗಿ 112 ಸಸಿಗಳನ್ನು ನೆಡುವ ಮೂಲಕ ಈ ದಿನವನ್ನು ಸ್ಮರಣೀಯವಾಗಿಸಲು ಸಲಹೆ ನೀಡಿದರು.
ಎಂಸಿಸಿ ಬ್ಯಾಂಕ್ ನ ಕಾನೂನು ಸಲಹೆಗಾರ ನ್ಯಾಯವಾದಿ ಎಂ.ಪಿ.ನರೋನ್ಹಾ ಬ್ಯಾಂಕ್ ರಾಜ್ಯ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಲಿ ಎಂದು ಶುಭ ಹಾರೈಸಿದರು.ಎಂಸಿಸಿ ಬ್ಯಾಂಕ್ ನ ಬೆಳವಣಿಗೆಯ ಬಗ್ಗೆ ಹಿರಿಯ ಪ್ರಬಂಧಕ ಡೆರಿಲ್ ಲಸ್ರಾದೊ ವರದಿ ವಾಚಿಸಿದರು.ಇದೇ ಸಂದರ್ಭದಲ್ಲಿ ಬ್ಯಾಂಕ್ ನ ವಿಶೇಷ ಗ್ರಾಹ ಕರಿಗೆ ಡೈಮಂಡ್ ಕಾರ್ಡ್ ವಿತರಿಸಲಾ ಯಿತು.ನೂತನ ಆಡಳಿತ ಕಚೇರಿಯ ನಿರ್ಮಾಣದಲ್ಲಿ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಎಂಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ .ಜೆ.ಡಿ.ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು.ಮನು ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.